Hospete: ಬುಕ್ಕಸಾಗರ ಮಠದಲ್ಲಿ ತಾಮ್ರಶಾಸನಗಳು ಪತ್ತೆ

ಬುಕ್ಕಸಾಗರ ಮಠದಲ್ಲಿ ತಾಮ್ರಶಾಸನಗಳು ಪತ್ತೆ

ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠದಲ್ಲಿ ಮೂರು  ತಾಮ್ರಶಾಸನಗಳು ಪತ್ತೆಯಾಗಿವೆ.ಅವುಗಳಲ್ಲಿ ಒಂದು ಪ್ರಕಟವಾಗಿದ್ದರೇ  ಉಳಿದೆರಡು ಅಪ್ರಕಟಿತ ಶಾಸನಗಳೆಂದು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ತಿಳಿಸಿದ್ದಾರೆ. ಮೊದಲ ಶಾಸನ ಸಾಮಾನ್ಯಶಕೆ  1612 ರ ಕಾಲದಿದ್ದು, ಚಂದ್ರಗಿರಿಯಿಂದ ಆಳುತ್ತಿದ್ದ ವಿಜಯನಗರ ಅರವೀಡು ಮನೆತನದ ವೆಂಕಟಪತಿದೇವರಾಯನು ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಜಂಗಮಾರ್ಚನೆಗಾಗಿ ಗಂಗಾವತಿ ಬಳಿಯ ಕಲ್ಗುಡಿ ಎಂಬ ಗ್ರಾಮವನ್ನು ದಾನವಾಗಿ ನೀಡಿದ ಬಗ್ಗೆ ತಿಳಿಸುತ್ತದೆ.( ಅದಕ್ಕಾಗಿ ಆ ಗ್ರಾಮ ಜಂಗಮರ ಕಲ್ಗುಡಿ ಎನಿಸಿದೆ) ಎರಡನೆಯ ಶಾಸನವು 21 ಸಾಲುಗಳಲ್ಲಿದ್ದು, ತೆಲುಗು ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ.ವಿಜಯನಗರ ಸಾಮ್ರಾಟ ಬುಕ್ಕರಾಯನ ಕಾಲದಲ್ಲಿ ಕುಂದ್ರುಪಿ ರಾಜ್ಯದ ವೀರಮಲ್ಲನಗೌಡ ರೆಡ್ಡಿಯು ನೀಡಿದ ದಾನದ ಬಗ್ಗೆ ತಿಳಿಸುತ್ತದೆ. 

ಮೂರನೆಯ ಶಾಸನವು 16ನೇ ಶತಮಾನಕ್ಕೆ ಸೇರಿದ್ದು ಮೂರು ಫಲಕಗಳಲ್ಲಿ 47 ಸಾಲುಗಳಲ್ಲಿ ಬರೆಯಲಾಗಿದೆ. ಇದು ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಕೆಳದಿ ದೊರೆ ವೆಂಕಟಪ್ಪನಾಯಕನ ಸೂಚನೆಯಂತೆ ಮಹಾನಾಡು ಹಾಗೂ ನಾನಾ ಪ್ರದೇಶಗಳ 25 ವ್ಯಾಪಾರಿಗಳು ಬುಕ್ಕಸಾಗರದ ಕರಿಸಿದ್ದೇಶ್ವರ ಮಠದ ಕಲ್ಯಾಣಸ್ವಾಮಿಗಳ ಶಿಶ್ಯರಾದ ಸಿದ್ಧಮಲ್ಲಿಕಾರ್ಜುನ ಸ್ವಾಮಿಗಳಿಗೆ ಅವರು ಮಠದಲ್ಲಿ ನಡೆಸುತ್ತಿದ್ದ ಮಹೇಶ್ವರರ  ಆರಾಧನೆಗಾಗಿ ಮೂರುವೀಸ ಅಡಕೆ, ಒಂದು ಎತ್ತಿನ ಹೇರಿನ ಮೆಣಸು, ಭತ್ತ ,ಉಪ್ಪಿನ ಹೇರಿಗೆ ಒಂದಕ್ಕೆ ಅರ್ಧವೀಸ ತೆರಿಗೆಯನ್ನು ದತ್ತಿಯಾಗಿ ನೀಡಿದ ಬಗ್ಗೆ ತಿಳಿಸುತ್ತದೆ. 

ಈ ಶಾಸನಗಳು ಬುಕ್ಕಸಾಗರ ಮಠದ ಗುರುಪರಂಪರೆ ಹಾಗೂ ಸಮಕಾಲೀನ ಆಳರಸರ ಹಾಗೂ ವರ್ತಕರ ಮೇಲೆ ಇದ್ದ ಅವರ ಪ್ರಭಾವನ್ನು ತಿಳಿಯಲು ಸಹಾಯಕವಾಗಿದ್ದು ಚಾರಿತ್ರಿಕವಾಗಿ ಮಹತ್ವದ್ದಾಗಿವೆ. ಇವುಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಡಾ. ಕೋಲ್ಕಾರ ತಿಳಿಸಿದ್ದಾರೆ.ಬುಕ್ಕಸಾಗರ  ಮಠದ ಗುರುಗಳಾದ ಶ್ರೀ ಕರಿಸಿದ್ದೇಶ್ವರ ವಿಶ್ವಾರಾಧ್ಯಸ್ವಾಮಿಗಳು, ಮಠದ ವಿಶ್ವನಾಥಸ್ವಾಮಿ  ಅವರು ಶಾಸನಗಳ ಪರಿಶೀಲನೆಗೆ ಅವಕಾಶ ಮಾಡಿರುವರೆಂದು ಮತ್ತು ಶಾಸನಗಳ ಉತ್ತಮ ಛಾಯಾಪ್ರತಿಯನ್ನು ಸಂಶೋಧನಾ ತಂಡದ ಸಂತೋಷ ಕುಂಬಾರ, ನಿರುಪಾದಿ ಭೋವಿ  ಮಾಡಿಕೊಟ್ಟಿದ್ದಾರೆ ಎಂದು ಡಾ. ಕೋಲ್ಕಾರ ತಿಳಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">