ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ - ಕುರುಗೋಡು ತಾಲೂಕಿನ ದಮ್ಮೂರುನಲ್ಲಿ ಹೃದಯವಿದ್ರಾವಕ ಘಟನೆ
ಕುರುಗೋಡು: ತಾಯಿ ತನ್ನ ಮೂವರು ಪುಟ್ಟ ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಬೇಸತ್ತಿದ್ದ ಸಿದ್ದವ್ವ (29) ಎಂಬವರು ತಮ್ಮ ಮಕ್ಕಳಾದ ಅಭಿಜ್ಞಾ (7), ಅವನಿ (5) ಮತ್ತು ಆರಾಧ್ಯ (3) ರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಹೊಸೂರ್ ಚಂಪಾ ಗ್ರಾಮದ ಮೂಲದ ಈ ಕುರಿಗಾಹಿ ಕುಟುಂಬ, ದಮ್ಮೂರು ಗ್ರಾಮದಲ್ಲಿ ಕೆಲ ದಿನಗಳಿಂದ ತಮ್ಮ ಕುರಿಗಳನ್ನು ಮೇಯಿಸಲು ತಂಗಿದ್ದರು. ಜೂನ್ 17 (ಮಂಗಳವಾರ) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ತಾಯಿ ಮತ್ತು ಮಕ್ಕಳು ಕುರಿಗಳನ್ನು ಬಿಟ್ಟು ಕಾಣೆಯಾಗಿದ್ದು, ಜೂನ್ 18 (ಬುಧವಾರ) ಬೆಳಗ್ಗೆ ಗ್ರಾಮಸ್ಥರು ಹತ್ತಿರದ ಕೃಷಿ ಹೊಂಡದ ಬಳಿ ಶೋಧನೆ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ.ಮೃತ ಮಹಿಳೆ ಸಿದ್ದವ್ವರನ್ನು 10 ವರ್ಷಗಳ ಹಿಂದೆ ಅವರ ಪೋಷಕರು ಹೊಂದೂರಿನ ಸಂಜಯ್ (32) ಎಂಬುವವರಿಗೆ ಮದುವೆ ಮಾಡಿಸಿದ್ದರು. ಆತ್ಮಹತ್ಯೆಗೆ ಗಂಡನ ಕಿರುಕುಳವೇ ಕಾರಣ ಎಂದು ಮೃತಳ ತಾಯಿ ರೇಣುಕಾ ಕುರುಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನವೀನ್ ಕುಮಾರ್, ಸಿಪಿಐ ವಿಶ್ವನಾಥ ಹಿರೇಗೌಡರ್, ಹಾಗೂ ಪಿಎಸ್ಐ ಸುಪ್ರಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಬಂಧ ಸಂಜಯ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.