ಬಳ್ಳಾರಿ: ಮುಂಗಾರು ಹಂಗಾಮಿನಲ್ಲಿ ಬೆಳೆದ ಜೋಳವನ್ನು ತಕ್ಷಣ ಖರೀದಿಸಲು ಜೋಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಜಿಲ್ಲೆಯ ಜೋಳ ಬೆಳೆದ ರೈತರು ಸೇರಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಮನವಿ ನೀಡಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡಿದ ಜೋಳಕ್ಕೆ ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.
ಜೋಳವನ್ನು ಕಟಾವು ಮಾಡಿ ಸುಮಾರು ಐದು ತಿಂಗಳು ಕಳೆದಿದ್ದು, ಖರೀದಿ ಕೇಂದ್ರ ತೆರೆಯಲು ವಿಳಂಬವಾಗುತ್ತಿರುವುದರಿಂದ ಹುಳ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಜೋಳ ಸಂರಕ್ಷಣೆಗಾಗಿ ಹೆಚ್ಚುವರಿ ವೆಚ್ಚ ಮಾಡಬೇಕಾಗುತ್ತಿದ್ದು, ಅಕಾಲಿಕ ಮಳೆಯಾದರೆ ಇನ್ನಷ್ಟು ನಷ್ಟ ಸಂಭವಿಸುವ ಭೀತಿ ಇದೆ ಎಂದು ರೈತರು ತಿಳಿಸಿದರು.
ಇದೇ ವೇಳೆ, ಬೆಳೆ ಬೆಳೆಯಲು ರೈತರು ಹೊರಗಡೆಯಿಂದ ಸಾಲ ಮತ್ತು ಗೊಬ್ಬರಗಳನ್ನು ಪಡೆದುಕೊಂಡಿದ್ದು, ಪಾವತಿಯಲ್ಲಿ ವಿಳಂಬವಾಗುವುದರಿಂದ ಬಡ್ಡಿ ಭಾರ ಹೆಚ್ಚುತ್ತಿದೆ ಎಂದು ದೂರಿದರು.
ಆದ್ದರಿಂದ ರೈತರಿಗೆ ಆಗುತ್ತಿರುವ ಸಂಕಷ್ಟವನ್ನು ಮನಗಂಡು ಕೂಡಲೇ ಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಿ.ವಿ. ಗೌಡ, ವೀರೇಶ್, ಕೆ. ರಾಮಣ್ಣ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.
