ಕೆ.ಆರ್.ಪೇಟೆ : ಗ್ರಾಮದೇವರು ಉಪ್ಪರಿಕೆ ಬಸವೇಶ್ವರ ಸ್ವಾಮಿಯ ಉತ್ಸವ|Siddi TV
ಕೆ.ಆರ್.ಪೇಟೆ. ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ಗ್ರಾಮದೇವರು ಉಪ್ಪರಿಕೆ ಬಸವೇಶ್ವರ ಸ್ವಾಮಿಯ ಉತ್ಸವ ಹಾಗೂ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಸೋಮವಾರ ರಾತ್ರಿ ವಿವಿಧ ಹೂವುಗಳಿಂದ ಅಲಂಕೃತಗೊಂಡ ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಇರಿಸಿ ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಉತ್ಸವದ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಮಾರ್ಗಗಳಿಗೆ ಹಾಗೂ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಮೆರವಣಿಗೆಯಲ್ಲಿ ಪೂಜಾ ಕುಣಿತ, ವೀರಭದ್ರೇಶ್ವರ ಕುಣಿತ, ಡೊಳ್ಳುಕುಣಿತ, ಮಕ್ಕಳ ಕೋಲಾಟ, ನಗಾರಿ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಭಕ್ತರು ಬಸವೇಶ್ವರ ಸ್ವಾಮಿಗೆ ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು.
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Tags
ಟಾಪ್ ನ್ಯೂಸ್