ಕೊಪ್ಪಳ,: ದೇಶವನ್ನು ಕಟ್ಟುವ ಮನುಕುಲ ತಂಬಾಕು, ಬೀಡಿ, ಸಿಗರೇಟು ದುಶ್ಚಟಗಳಿಗೆ ಬಲಿಯಾಗಬಾರದು. ದುಶ್ಚಟಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ ಸುಂದರೇಶ್ ಬಾಬು ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಬುಧವಾರ ವಿಶ್ವ ತಂಬಾಕು ನಿಷೇಧ ದಿನದ ಅಂಗವಾಗಿ ಏರ್ಪಡಿಸಿದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದುಶ್ಚಟ ಇಂದಿನ ಸಮಾಜದ ಜ್ವಲಂತ ಸಮಸ್ಯೆಯಾಗಿದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಮನುಷ್ಯ ದುಶ್ಚಟಗಳಿಗೆ ದಾಸನಾಗುತ್ತಿದ್ದಾನೆ ತನ್ನ ದೈಹಿಕ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ. ಕೌಟುಂಬಿಕವಾಗಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ ಇದರಿಂದ ಹೊರಬರಲು ಮನುಷ್ಯನಿಗೆ ಆಂತರಿಕ ಮಾನಸಿಕ ಶಕ್ತಿ ಬೇಕು ಮನಸ್ಸಿನ ಮೇಲೆ ನಿಯಂತ್ರಣ ಬೇಕು ಅದಕ್ಕಾಗಿ ಈಶ್ವರೀಯ ವಿಶ್ವವಿದ್ಯಾಲಯ ಜೂನ್ ಒಂದರಿಂದ ಏರ್ಪಡಿಸಿರುವ ಮನೋ ನಿಯಂತ್ರಣ ಶಿಬಿರದ ಲಾಭ ಪಡೆದುಕೊಳ್ಳಬೇಕೆಂದು ಸಾರ್ವಜನಿಕರಿಗೆ ಕರೆ ನೀಡಿದರು. ಜಿಲ್ಲಾ ನ್ಯಾಯಾಲಯದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಬಿಎಸ್ ರೇಖಾ ಅವರು ಜ್ಯೋತಿ ಬೆಳಗಿಸಿ ಮಾತನಾಡಿ, ತಂಬಾಕು ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ಹೆಚ್ಚು ಆಗಬೇಕು ಎಂದರು. ಇಂದಿನ ಸಮಯದಲ್ಲಿ ತಂಬಾಕು ಸಿಗರೇಟು ಸೇವನೆ ಒಂದು ಫ್ಯಾಷನ್ ಆಗಿದೆ ತಂಬಾಕು ಎನ್ನುವ ಬೆಂಕಿ ಮನುಷ್ಯನ ಜೀವನವನ್ನೇ ಸುಟ್ಟು ಹಾಕುತ್ತದೆ ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದರು. ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಾತನಾಡಿ, ಇಂದಿನ ಮಕ್ಕಳು ಪಾಲಕ ಪೋಷಕರನ್ನು ಅನುಕರಣೆ ಮಾಡುತ್ತಾರೆ ಆದ್ದರಿಂದ ಪಾಲಕ ಪೋಷಕರು ತಾವು ಸಿಗರೇಟು ತಂಬಾಕಿನಿಂದ ಮುಕ್ತರಾಗಿ ದೇಶದ ಸಂಪತ್ತಾಗುವ ಮಕ್ಕಳನ್ನು ಅದರಿಂದ ರಕ್ಷಿಸಬೇಕು ಎಂದರು. ಮನುಷ್ಯ ದುಶ್ಚಟಗಳಿಗೆ ಗುರಿಯಾಗಲು ಆತನ ದುರ್ಬಲ ವಿಚಾರಗಳೇ ಕಾರಣ ವಿಚಾರಗಳು ಪರಿವರ್ತನೆ ಯಾಗದೆ ಆಚಾರ ಪರಿವರ್ತನೆ ಆಗದು ಕೆಟ್ಟ ವಿಚಾರ, ಕೆಟ್ಟ ಸಂಗ, ಕೆಟ್ಟ ಚಟ್ಟದಿಂದ ಮುಕ್ತರಾಗಲು ಒಳ್ಳೆ ಸಂಗ, ಒಳ್ಳೆ ವಿಚಾರ, ಒಳ್ಳೆ ಸಂಸ್ಕಾರ ಜೀವನದಲ್ಲಿ ಬೇಕು. ನಮ್ಮ ಆಲೋಚನಾ ಶಕ್ತಿಯನ್ನು ಸಕರಾತ್ಮಕ ಗೊಳಿಸಲು ರಾಜಯೋಗ ಒಂದು ದಿವ್ಯ ಔಷಧಿ ಎಂದರು. ಇದೇ ಸಂದರ್ಭದಲ್ಲಿ ಸ್ತಬ್ಧ ಚಿತ್ರದೊಂದಿಗೆ ಜಾಗೃತಿ ಅಭಿಯಾನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಆರೋಗ್ಯ ಜಾಗೃತಿ ಮೂಡಿಸಿತು. ಬ್ರಹ್ಮಕುಮಾರಿ ಸ್ನೇಹಕ್ಕ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿದರು.
ವರದಿ : ಶಿವಕುಮಾರ ಹಿರೇಮಠ