ವನಸಿರಿ ಫೌಂಡೇಶನ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಸರ ಸಂರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವುದು ತುಂಬಾ ಶ್ಲಾಘನೀಯ:ಪ್ರಕಾಶ ಬಿಂಗಿ
ಸಿಂಧನೂರು ನಗರದ ವಾರ್ಡ್ ನಂಬರ್10 ಭಗೀರಥ ಕಾಲೋನಿಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಪ್ರಕಾಶ ಬಂಗಿಯವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಕಾಶ ಬಿಂಗಿ ಅವರು ಮಾತನಾಡಿ ವನಸಿರಿ ಫೌಂಡೇಶನ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಸರ ಸಂರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವುದು ತುಂಬಾ ಶ್ಲಾಘನೀಯ.ವನಸಿರಿ ತಂಡದ ಕಾರ್ಯವನ್ನು ನೋಡಿ ನಾವು ಕೂಡಾ ಇಂದು ನಮ್ಮ ಭಗೀರಥ ಕಾಲೋನಿಯ ನಿವಾಸಿಗಳೆಲ್ಲರೂ ಸೇರಿಕೊಂಡು ನಮ್ಮ ಕಾಲೋನಿಯನ್ನು ಕೂಡಾ ಹಸಿರೀಕರಣ ಮಾಡಬೇಕೆಂದು ಇಂದು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪುರ ಹಾಗೂ ಅರಣ್ಯ ಅಧಿಕಾರಿಗಳ ಜೊತೆಗೆ ಮಾತನಾಡಿ ಸಸಿಗಳನ್ನು ಪಡೆದು ನಮ್ಮ ಕಾಲೋನಿಯ ಪ್ರತಿ ಮನೆಯ ಮುಂಭಾಗದಲ್ಲಿ, ಉದ್ಯಾನವನದಲ್ಲಿ ಸಸಿಗಳನ್ನು ನೆಡುತ್ತಿದ್ದೇವೆ ಇದಕ್ಕೆ ಸಹಕಾರ ನೀಡಿದ ಅರಣ್ಯ ಅಧಿಕಾರಿಗಳಿಗೂ,ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರಿಗೂ ನಮ್ಮ ಕಾಲೋನಿಯ ನಿವಾಸಿಗಳಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ನಂತರ ಮಾತನಾಡಿದ ಅರಣ್ಯ ಅಧಿಕಾರಿ ಮುನಿಸ್ವಾಮಿ ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ. ಇಂತಹ ವಾತಾವರಣದಲ್ಲಿನ ಗಿಡಮರಗಳ ರಕ್ಷಣೆಗೆ ನಾವುಗಳೆಲ್ಲರೂ ಮುಂದಾಗಬೇಕು,ಗಿಡ ಮರಗಳಿಂದ ನೆಲ,ಜಲ,ವಾಯು ಮಾಲಿನ್ಯವನ್ನು ತಪ್ಪಿಸಲು ಸಾಧ್ಯ.ಪರಿಸರ ಮಾಲಿನ್ಯ ತಡೆಯುವಲ್ಲಿ ಗಿಡಮರಗಳ ಪಾತ್ರ ಮಹತ್ವದ್ದಾಗಿದೆ.ಅರಣ್ಯ ಪ್ರದೇಶವನ್ನು ಹೆಚ್ಚಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ವನಸಿರಿ ಅಮರೇಗೌಡ ಮಲ್ಲಾಪುರ,ಅರಣ್ಯ ಅಧಿಕಾರಿ ಮುನಿಸ್ವಾಮಿ,ಪ್ರಕಾಶ ಬಿಂಗಿ, ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್ ಹಾಗೂ ಭಗೀರಥ ಕಾಲೋನಿಯ ನಿವಾಸಿಗಳಿದ್ದರು.