Ballari : ಗರ್ಭಿಣಿ ಮಹಿಳೆಯರು ಸೂಕ್ತ ಆರೈಕೆ ಪಡೆಯಬೇಕು: ಡಿಹೆಚ್‌ಓ ಡಾ.ವೈ.ರಮೇಶ್‌ಬಾಬು


ಗರ್ಭಿಣಿ ಮಹಿಳೆಯರು ಸೂಕ್ತ ಆರೈಕೆ ಪಡೆಯಬೇಕು: ಡಿಹೆಚ್‌ಓ ಡಾ.ವೈ.ರಮೇಶ್‌ಬಾಬು

ಬಳ್ಳಾರಿ : 

ಮಹಿಳೆಯು ತಾನು ಗರ್ಭಿಣಿ ಎಂದು ತಿಳಿದ ದಿನದಿಂದಲೇ ಸೂಕ್ತ ಆರೈಕೆ ಪಡೆಯುವುದರೊಂದಿಗೆ ತಾಯಿ-ಮಗುವಿನ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ತಿಳಿಸಿದರು.

ನಗರದ ಬಂಡಿಹಟ್ಟಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ಗರ್ಭಿಣಿ ಮನೆಗೆ ಸೋಮವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.

ಗರ್ಭಿಣಿಯ ಆರೈಕೆಯನ್ನು ಕುಟುಂಬದ ಸದಸ್ಯರು ಅದರಲ್ಲೂ ಗಂಡನ ಮನೆಯಲ್ಲಿ ಮನೆಯ ಮಗಳಂತೆ ಕಾಳಜಿವಹಿಸಬೇಕು ಎಂದು ಹೇಳಿದರು.

ರಕ್ತದಲ್ಲಿ ಕಬ್ಬಿಣಾಂಶ 12 ಹೆಚ್‌ಬಿ ಗಿಂತ ಹೆಚ್ಚು ಇರುವಂತೆ ಮುತವರ್ಜಿವಹಿಸಬೇಕು. ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಲು ಆದ್ಯತೆ ನೀಡಬೇಕು. ಹೆರಿಗೆಯಾದ 45 ದಿನಗಳವರೆಗೆ  ತಾಯಿ-ತಂದೆ,  ಗಂಡ ಹಾಗೂ ಮನೆಯ ಸದಸ್ಯರು ಬಾಣಂತಿಯ ಆರೋಗ್ಯದಲ್ಲಾಗುವ ಯಾವುದೇ ಸಮಸ್ಯೆಯನ್ನು ತಕ್ಷಣವೇ ವೈದ್ಯರ ಗಮನಕ್ಕೆ ತರುವುದರ ಜೊತೆಗೆ ಅಗತ್ಯ ಚಿಕಿತ್ಸೆಗೆ ನೆರವಾಗಲಿದೆ ಎಂದರು.

ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಸಮಯವಾರು ಪೌಷ್ಟಿಕ ಆಹಾರ ನೀಡಬೇಕು ಹಾಗೂ ಮಗುವಿಗೆ 06 ತಿಂಗಳವರೆಗೆ ದಿನಕ್ಕೆ  ಕನಿಷ್ಠ 10- 12 ಬಾರಿ ಎದೆ ಹಾಲು ಮಾತ್ರ ಉಣಿಸಬೇಕು. ಇದರ ಜೊತೆಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶುಮರಣ ತಡೆಗಟ್ಟುವ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದರು.

ಹೆಣ್ಣು ಮಗಳಿಗೆ 18 ವರ್ಷ ವಯಸ್ಸಿನ ನಂತರ ಮದುವೆ ಮಾಡಿಸುವುದರ ಜೊತೆಗೆ 20 ವರ್ಷ ವಯಸ್ಸಿನಲ್ಲಿ ಗರ್ಭಿಣಿ ಆದಲ್ಲಿ ಮಗುವಿನ ಬೆಳವಣಿಗೆಗೆ ಗರ್ಭಕೋಶವು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಯಾವುದೇ ತೊಂದರೆಯಿಲ್ಲದೆ ಹೆರಿಗೆ ನಿರ್ವಹಿಸಲು ಸಾಧ್ಯವಾಗತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದರು.

ಗರ್ಭಿಣಿಯೆಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ್ ಪಡೆದು ವೈದ್ಯರ ಸಲಹೆಯಂತೆ ಅಗತ್ಯವಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಪರೀಕ್ಷೆ ಮಾಡಿಸುವದರಿಂದ ಆರಂಭದಲ್ಲಿಯೇ ನ್ಯೂನತೆಗಳನ್ನು ಸರಿಪಡಿಸಲು ಸಹಾಯಕವಾಗಲಿದೆ. ಜೊತೆಗೆ ತವರು ಮನೆಗೆ ಹೆರಿಗೆಗೆ ಕಳುಹಿಸುವ ಅವಧಿಯೊಳಗೆ ರಕ್ತದಲ್ಲಿ ಹೆಚ್‌ಬಿ ಪ್ರಮಾಣ 12ಕ್ಕಿಂತ ಹೆಚ್ಚಿರುವ ಜವಾಬ್ದಾರಿ ಅತ್ಯಂತ ಪ್ರಮುಖವಾಗುತ್ತದೆ ಎಂದು ತಿಳಿಸಿದರು.

ಗಂಡಾಂತರ ಗರ್ಭಿಣಿ:

ಗಂಡಾAತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 18 ವರ್ಷಕ್ಕಿಂತ ಮೊದಲು ಅಥವಾ 30 ವರ್ಷ ವಯಸ್ಸಿನ ನಂತರ  ಗರ್ಭಿಣಿಯಾದಲ್ಲಿ, ರಕ್ತದಲ್ಲಿ ಕಬ್ಬಿಣಾಂಶ 9 ಕ್ಕಿಂತ ಕಡಿಮೆ, ಎತ್ತರ 142 ಸೆಂ.ಮೀ ಕಡಿಮೆ, ರಕ್ತದೊತ್ತಡ 140/90 ಗಿಂತ ಹೆಚ್ಚು, ಅವಳಿ-ಜವಳಿ ಗರ್ಭಿಣಿಯಾದಲ್ಲಿ, ಮೊದಲ ಹೆರಿಗೆ ಶಸ್ತçಚಿಕಿತ್ಸೆಯಾದಲ್ಲಿ, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಮೂರ್ಛೆರೋಗ, ಥೈರಾಯ್ಡ್, ಹೈಪೊಥೈರಾಯ್ಡ್, ರಕ್ತ ಸಂಬAಧಿತ ಖಾಯಿಲೆ, ಗರ್ಭಕೋಶದ ಬೆಳವಣಿಯ ತೊಂದರೆ, ಸ್ಕಾö್ಯನಿಂಗ್‌ನಲ್ಲಿ ಮಗು ಅಡ್ಡಲಾಗಿ ಇರುವದು ಕಂಡುಬರುವುದು, ಮಾಸದ ಸ್ಥಳದ ಅಡಚಣೆ (ಪ್ಲಸೇಂಟಾ ಪ್ರಿವಿಯಾ) ಮುಂತಾದ ತೊಂದರೆಗಳು ಇರುವವರು ತಪ್ಪದೇ ವೈದ್ಯರ ನಿರ್ದೇಶನ ಹಾಗೂ ಮಾರ್ಗದರ್ಶನ ಪಡೆದು ಸ್ಥಳೀಯ ವೈದ್ಯಕೀಯ ಸಿಬ್ಬಂದಿಯವರ ಸಲಹೆಯಂತೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.

ಗರ್ಭಿಣಿಯರ ಸ್ಕ್ಯಾನಿಂಗ್:

ಗರ್ಭಿಣಿಯೆಂದು ತಿಳಿದ ನಂತರ ವೈದ್ಯರ ಸಲಹೆಯಂತೆ, ಎರಡುವರೆ ತಿಂಗಳಿನಿಂದ ಮೂರುವರೆ ತಿಂಗಳು ಅವಧಿಯಲ್ಲಿ ಸಹಜವಾಗಿ ಮೊದಲ ಬಾರಿ, ನಾಲ್ಕುವರೆ ತಿಂಗಳಿನಿAದ ಐದುವರೆ ತಿಂಗಳಿನಲ್ಲಿ ಎರಡನೇ ಬಾರಿ, ಎಂಟುವರೆ ತಿಂಗಳಿನಿಂದ ಒಂಬತ್ತನೇ ತಿಂಗಳಿನಲ್ಲಿ ಮೂರನೆಯ ಬಾರಿ ಸ್ಕ್ಯಾನಿಂಗ್ ಮಾಡಿಸಬೇಕು. ಒಂದು ವೇಳೆ ತೀರ ಅಗತ್ಯವೆನಿಸಿದಲ್ಲಿ ಮಾತ್ರ ತಜ್ಞರ ಸಲಹೆಯಂತೆ ಹೆಚ್ವುವರಿಯಾಗಿ ಸ್ಕ್ಯಾನಿಂಗ್ ಮಾಡಿಸಬೇಕು, ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ತಿಳಿಸಿದರು.

ಪೌಷ್ಟಿಕ ಆಹಾರ ಮತ್ತು ಕಬ್ಬಿಣಾಂಶ ಮಾತ್ರೆ ಸೇವನೆ:

ಪ್ರತಿದಿನ ಸ್ಥಳೀಯವಾಗಿ ದೊರಕುವ ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಹಣ್ಣುಗಳನ್ನು ದೈನಂದಿನವಾಗಿ ಸೇವಿಸಬೇಕು ಹಾಗೂ ಆರೋಗ್ಯ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ 1 ರಂತೆ 180 ಮಾತ್ರೆಗಳನ್ನು ಊಟ ಮಾಡಿದ 1 ಗಂಟೆಯ ನಂತರ ಸೇವಿಸಬೇಕು. ಒಂದು ವೇಳೆ ರಕ್ತಹೀನತೆ ಇರುವ ಕುರಿತು, ವೈದ್ಯರು ತಿಳಿಸಿದಲ್ಲಿ ಪ್ರತಿದಿನ 2 ರಂತೆ 360 ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು.

108 ತುರ್ತು ಅಂಬ್ಯುಲೆನ್ಸ್:

ತಮ್ಮ ಮನೆಯಿಂದ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಲು ಶುಲ್ಕಮುಕ್ತವಾಗಿರುವ 108 ಕ್ಕೆ ಕರೆ ಮಾಡಿದಲ್ಲಿ ತಮ್ಮ ಮನೆ ಬಾಗಿಲಿಗೆ ಅಂಬುಲೆನ್ಸ್ ಆಗಮಿಸಿ ಆಸ್ಪತ್ರೆಗೆ ಬಿಡುವ ವ್ಯವಸ್ಥೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ವಿನಂತಿಸಿದರು.

ಈ ವೇಳೆ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಆಶ್ರಯ ಕಾಲೋನಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾಶಿ ಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಪಿಹೆಚ್‌ಸಿಒ ದಾನಕುಮಾರಿ, ಆಶಾ ಕಾರ್ಯಕರ್ತೆ ಗಿರಿಜಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಇದ್ದರು.


Previous Post Next Post

Contact Form

f="https://unpkg.com/video.js/dist/video-js.css" rel="stylesheet">