ಮುಖ್ಯಾಧಿಕಾರಿ ದುರ್ಗಣ್ಣರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ : ಅಪರೂಪದ ಕರ್ತವ್ಯನಿಷ್ಠಾಧಿಕಾರಿ ಇಂದು ನಿವೃತ್ತಿ
ಕಂಪ್ಲಿ : ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಹಲವು ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಕೆ. ದುರುಗಣ್ಣ ಅವರು ಇಂದು ವಯೋನಿವೃತ್ತಿ ಹೊಂದಿದ್ದು, ಪಟ್ಟಣದ ಮಾರುತಿನಗರದ ಪುರಸಭೆ ಸಮುದಾಯ ಭವನ ಆವರಣದಲ್ಲಿ ಅವರಿಗಾಗಿ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪುರಸಭೆ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಹಾಗೂ ಊರಿನ ಮುಖಂಡರು ಭಾಗವಹಿಸಿ ದುರುಗಣ್ಣ ಅವರಿಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ಸಲ್ಲಿಸಿದರು. ಸಂಘ ಸಂಸ್ಥೆಗಳ ಪ್ರತಿನಿಧಿಗಳೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅವರ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಕೆ. ದುರುಗಣ್ಣ ಅವರು ತೀವ್ರವಾಗಿ ನೆನಪಿಗೆ ಬರೋ ಘಟನೆ ಎಂದರೆ, ಕಳೆದ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಂಪ್ಲಿ ನದಿಗೆ ನೀರು ಹರಿದಾಗ, ಕಂಪ್ಲಿ-ಗಂಗಾವತಿ ನಡುವಿನ ಸೇತುವೆ ಮುಳುಗಿದ ಘಟನೆ. ಆ ವೇಳೆ ಇವರು ಮೇಲಾಧಿಕಾರಿಗಳಿಂದ ನೋಡಲ್ ಅಧಿಕಾರಿಯಾಗಿ ನೇಮಕಗೊಂಡು, ಅಪಾರ ಶ್ರಮದಿಂದ ಕಾರ್ಯ ನಿರ್ವಹಿಸಿದ್ದರು. ಹಗಲು-ಇರುಳು ಎಂಬ ಭೇದವಿಲ್ಲದೇ ತಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದು, ಕೆಲವೊಂದು ದಿನಗಳು ಸೇತುವೆ ಬಳಿಯೇ ರಾತ್ರಿಯೂ ಕಳೆದ ಘಟನೆಗಳೂ ಜನರಿಗೆ ಇನ್ನೂ ನೆನಪಿವೆ.
ಇಂತಹ ಕರ್ತವ್ಯನಿಷ್ಠ, ಬದ್ಧತೆಯುಳ್ಳ ಅಧಿಕಾರಿಯೊಬ್ಬರು ನಿವೃತ್ತಿಯಾಗಿರುವುದು ಪುರಸಭೆಗೆ ಒಂದು ವಿಶಿಷ್ಟ ಕ್ಷಣವಾಗಿದೆ.
ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ದುರುಗಣ್ಣ ಅವರನ್ನು ಸನ್ಮಾನಿಸಿ, ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂಬ ಹಾರೈಕೆಗಳನ್ನು ಎಲ್ಲರೂ ವ್ಯಕ್ತಪಡಿಸಿದರು.