ಗುರುವೇ… ನಿಮಗೆಂದೆಂದಿಗೂ ನಾ ಚಿರಋಣಿ
ಕಂಪ್ಲಿ, ಆಗಸ್ಟ್ 13:ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರ. ವಿದ್ಯಾರ್ಥಿಯ ಮನಸ್ಸನ್ನು ಅರ್ಥಮಾಡಿಕೊಂಡು, ಭವಿಷ್ಯ ಕಟ್ಟಿಕೊಡುವ ಶಕ್ತಿ ಶ್ರೇಷ್ಠ ಗುರುವಿಗೆ ಮಾತ್ರ ಸಾಧ್ಯ. ಅಂತಹ ಶ್ರೇಷ್ಠ ಗುರುಗಳ ಸಾಲಿನಲ್ಲಿ ಮೊದಲಿಗರಾಗಿ ನಿಲ್ಲುವವರು ನಮ್ಮೂರಿನ ಡಿ.ಮಲ್ಲಿಕಾರ್ಜುನ ಸರ್ ಎಂದು ನಿವೇದಿತಾ ಶಾಲೆಯ ಮುಖ್ಯಗುರು ಹೆಚ್.ಮರಿಯಪ್ಪ ಭಾವುಕರಾಗಿ ತಿಳಿಸಿದ್ದಾರೆ.
ಮರಿಯಪ್ಪ ಅವರು ತಮ್ಮ ಬಾಲ್ಯದ ನೆನಪು ಹಂಚಿಕೊಂಡು, “ನಾನು 1ರಿಂದ 8ನೇ ತರಗತಿಯವರೆಗೂ ಓದುತ್ತಿದ್ದಾಗ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದೆ. ಆಗ ಡಿ.ಮಲ್ಲಿಕಾರ್ಜುನ ಸರ್ ನಮ್ಮ ಮನೆ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಆಟದೊಂದಿಗೆ ಪಾಠ ಮಾಡುವ ಮೂಲಕ ಮಕ್ಕಳ ನೆಚ್ಚಿನ ಹೀರೋ ಆಗಿದ್ದರು” ಎಂದು ಹೇಳಿದರು.
ಅವರು ಮುಂದುವರಿಸಿ, “ನಮ್ಮ ಮೇಷ್ಟ್ರು ಜಿ.ಮಲ್ಲಿಕಾರ್ಜುನ ಗೌಡ, ಕೆ.ಎಂ.ಚಂದ್ರಶೇಖರಯ್ಯ, ಜಿ.ಗೋಪಾಲ ಕೃಷ್ಣ ಆಚಾರಿ, ಬಿ.ಚಂದ್ರಶೇಖರ್, ಮಹೆಬೂಬು ಸಾರ್ ಮುಂತಾದವರೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತೋರಿದ ಕಾಳಜಿ ನಮ್ಮ ಅಪ್ಪ-ಅಮ್ಮನೂ ತೋರಲಿಲ್ಲ. ನಾನು ಸಾಮಾನ್ಯ ವ್ಯಕ್ತಿ ಆಗುವುದಿಲ್ಲ, ದೊಡ್ಡ ವ್ಯಕ್ತಿಯಾಗುತ್ತೀಯೆ ಎಂದು ಸರ್ ಹೇಳುತ್ತಿದ್ದದ್ದು ನನ್ನಲ್ಲಿ ಆತ್ಮವಿಶ್ವಾಸ ತುಂಬಿತು” ಎಂದು ಕಣ್ಣೀರು ತೋಯಿಸಿದರು.
ನಿವೃತ್ತಿ ಸಮಾರಂಭಕ್ಕೆ ಕಾರಣಾಂತರಗಳಿಂದ ಹಾಜರಾಗಲು ಆಗಲಿಲ್ಲ ಎಂಬ ನೋವನ್ನೂ ಮರಿಯಪ್ಪ ಹಂಚಿಕೊಂಡರು. “ನಾನು ಬರಲಾಗುವುದಿಲ್ಲ ಎಂದು ಹೇಳುವ ಧೈರ್ಯ ನನಗಿರಲಿಲ್ಲ, ಏಕೆಂದರೆ ನನಗೆ ಈಗಲೂ ಗುರುಗಳ ಮೇಲೆ ಅದೇ ಭಯ, ಅದೇ ಭಕ್ತಿ, ಅದೇ ಗೌರವ ಇದೆ. ಕಾರ್ಯಕ್ರಮದ ವಿಡಿಯೋ ನೋಡಿ ಆನಂದಭಾಷ್ಪ ಉಕ್ಕಿಬಂದಿತು” ಎಂದು ಹೇಳಿದರು.
“ಗುರುವೇ… ನಿಮ್ಮ ಆಶೀರ್ವಾದವೇ ನನ್ನಂತಹ ಶಿಷ್ಯರಿಗೆ ಶ್ರೀರಕ್ಷೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನೇಂದೆಂದಿಗೂ ಚಿರಋಣಿ” ಎಂದು ಭಾವುಕರಾಗಿ ತಮ್ಮ ಗುರುಗಳಿಗೆ ಮರಿಯಪ್ಪ ಕೃತಜ್ಞತೆ ಸಲ್ಲಿಸಿದರು.