ಕಂಪ್ಲಿ ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಸಂಜೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಮೋಟಿವೇಶನ್ ತರಗತಿ ಹಮ್ಮಿಕೊಳ್ಳಲಾಯಿತು. ಗಣಿತ ವಿಷಯದ ಅನುಭವಿ ಶಿಕ್ಷಕರಾದ ಶ್ರೀ ಗೋಪಾಲಕೃಷ್ಣ ಆಚಾರಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಶ್ರೀ ಗೋಪಾಲಕೃಷ್ಣ ಆಚಾರಿ ಅವರು, ವಾರ್ಷಿಕ ಪರೀಕ್ಷೆ ವೇಳೆ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುವ ಭಯ ಮತ್ತು ಆತಂಕವನ್ನು ನಿವಾರಿಸಲು ಸರಳ ಅಧ್ಯಯನ ವಿಧಾನಗಳನ್ನು ತಿಳಿಸಿದರು. ತಮ್ಮ ಪ್ರಾಥಮಿಕ ಶಿಷ್ಯನಾದ ಹಾಗೂ ಕಂಪ್ಲಿಯ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಮರಿಯಪ್ಪ ಅವರ ಆಹ್ವಾನದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ಮಾರ್ಗಗಳನ್ನು ಮಕ್ಕಳಿಗೆ ತಿಳಿಸಿದ್ದೇನೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಹೆಚ್. ಮರಿಯಪ್ಪ ಮಾತನಾಡಿ, “ನನ್ನ ಪ್ರಾಥಮಿಕ ಹಂತದಲ್ಲಿ ಗಣಿತ ಶಿಕ್ಷಕರಾಗಿದ್ದ ಶ್ರೀ ಗೋಪಾಲಕೃಷ್ಣ ಆಚಾರಿ ಸಾರ್ ಅವರು ನೀಡಿದ ಮಾರ್ಗದರ್ಶನ ಮತ್ತು ಅನುಭವಗಳು ನನಗೆ ಜೀವನದಲ್ಲಿ ಬಹಳ ಉಪಯೋಗವಾಗಿವೆ. ಆ ಅನುಭವಗಳನ್ನು ಇಂದು ನಮ್ಮ ವಿದ್ಯಾರ್ಥಿಗಳಿಗೂ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ. ಅವರ ಆಶೀರ್ವಾದ ಸದಾ ನಮ್ಮ ಮೇಲೆ ಹಾಗೂ ಮಕ್ಕಳ ಮೇಲೆ ಇರಲಿ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶುಭಾಷ್, ಮಹೇಶ್ ಕುಮಾರ್, ಅಪ್ರೋಜ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
