ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ್ ಕರಡಿಯಿಂದ ಸಿವಿಸಿಗೆ ತಕ್ಕ ಉತ್ತರ
ಸಂಸದರ ಬಗ್ಗೆ ಮಾತನಾಡಲು ಸಿವಿಸಿಗೇನಿದೆ ನೈತಿಕತೆ.. ?
ಕೊಪ್ಪಳ,: ಸಂಸದ ಸಂಗಣ್ಣ ಕರಡಿ ಅವರು ಜಿಲ್ಲೆ ಕಂಡ ನಿಷ್ಪಕ್ಷಪಾತ ಹಾಗೂ ಜಾತ್ಯತೀತ ನಾಯಕ. ಇವರ ಬಗ್ಗೆ ಮಾತನಾಡಲು ಸಿ.ವಿ.ಚಂದ್ರಶೇಖರ್ ಅವರಿಗೆ ಏನಿದೆ ನೈತಿಕತೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ್ ಕರಡಿ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂಸದರಾದ ಸಂಗಣ್ಣ ಕರಡಿ ಅವರು ಬ್ಲಾಕ್ಮೇಲೆ ಮಾಡಿ ಟಿಕೆಟ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ ಸಿ.ವಿ.ಸಿಗೆ ನೈತಿಕತೆ ಇಲ್ಲ. ಬಿಜೆಪಿ ಸಿವಿಸಿಗೆ ಎಂಎಲ್ಸಿ ಟಿಕೆಟ್ ನೀಡಿತ್ತು. ಪಕ್ಷದಲ್ಲಿ ರಾಷ್ಟ್ರೀಯ ಪರಿಷತ್ ಸದಸ್ಯ ಸ್ಥಾನ ನೀಡಿತ್ತು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡಲು ಪಕ್ಷ ಸಿದ್ಧವಿತ್ತು. ಆದರೆ, ಪಕ್ಷದಿಂದ ಹೊರಬಂದು ಜೆಡಿಎಸ್ ಸೇರಿದರು. ಉಂಡ ಮನೆಗೆ ಕನ್ನ ಹಾಕಿದ್ದಾರೆ. ಅವರು ಸಂಸದರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದರು. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 2013 ಮತ್ತು 2018ರಲ್ಲಿ ಬಿಜೆಪಿಗೆ ಸೋಲಾಗಲು ಸಿವಿಸಿ ಪರೋಕ್ಷವಾಗಿ ಕಾರಣಿಕರ್ತರಾಗಿದ್ದಾರೆ. ಬಿಜೆಪಿಯಲ್ಲಿ ಸ್ಥಾನಮಾನ ಪಡೆದು ಪ್ರಾದೇಶಿಕ ಪಕ್ಷಕ್ಕೆ ಸೇರಿರುವ ಅವರು ಪಕ್ಷ ನಿಷ್ಠೆ ಬಗ್ಗೆ ಮಾತನಾಡುವುದು ಸರಿಯಲ್ಲ. ಸಂಸದ ಸಂಗಣ್ಣ ಕರಡಿ ಅವರು ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಕೊಪ್ಪಳ ಜಿಲ್ಲೆ ಅಭಿವೃದ್ಧಿ ಮಾಡಿದ್ದಾರೆ. ಅಂತಹ ಧೀಮಂತ ನಾಯಕನ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.
ನಮ್ಮ ಮಾವನವರು 2004ರಲ್ಲಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸೇರಿದರು. ಅವತ್ತಿನ ಆತಂರಿಕ ಕಚ್ಚಾಟದಿಂದ ಜೆಡಿಎಸ್ ಗೆ ಹೋಗುವ ಸಂದರ್ಭ ಬಂದಿತು. ಪುನಃ 2010ರಲ್ಲಿ ಬಿಜೆಪಿ ಸೇರಿದ ಸಂಸದರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಭದ್ರ ಬುನಾದಿ ಹಾಕಲು ಸಾಕಷ್ಟು ಶ್ರಮವಹಿಸಿದ್ದಾರೆ. 2004 ಮತ್ತು 2013 ರಲ್ಲಿ ಸಂಸದರು ಬಿಜೆಪಿಯಿಂದ ಪರಾಭವಗೊಂಡ ನಂತರವೂ ಪಕ್ಷ ಸಂಘಟನೆಗೆ ಒತ್ತು ನೀಡಿ ಪಕ್ಷ ಬಲಿಷ್ಠಗೊಳಿಸಿದ್ದಾರೆ. 2018 ಮತ್ತು 2023 ರಲ್ಲಿ ನಮ್ಮ ಕುಟುಂಬದ ಸದಸ್ಯರು ಪರಾಭವಗೊಂಡರೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ನಮ್ಮ ಸಾಂಪ್ರದಾಯಿಕ ಎದುರಾಳಿ ಎನ್ನಲಾದ ಹಿಟ್ನಾಳ್- ಕರಡಿ ಕುಟುಂಬಗಳ ನಡುವೆ 1994, 1999, 2004, 2008, 2011, 2013, 2018, 2023ರ ವಿಧಾನಸಭಾ ಚುನಾವಣೆ ಹಾಗೂ 2014, 2019 ರ ಲೋಕಸಭೆಯಲ್ಲಿ ಸ್ಪರ್ಧೆ ನಡೆದಿದೆ. ಇದರಲ್ಲಿ ನಾಲ್ಕು ಬಾರಿ ವಿಧಾನಸಭೆ ಹಾಗೂ ಎರಡು ಬಾರಿ ಲೋಕಸಭೆಗೆ ಕರಡಿ ಸಂಗಣ್ಣ ಅವರು ಆಯ್ಕೆಯಾಗಿದ್ದಾರೆ. ಇನ್ನು ನಾಲ್ಕು ಬಾರಿ ಹಿಟ್ನಾಳ್ ಕುಟುಂಬದವರು ಶಾಸಕರಾಗಿದ್ದಾರೆ. ಕೊಪ್ಪಳದಲ್ಲಿ ಕರಡಿ- ಹಿಟ್ನಾಳ್ ಕುಟುಂಬ ನಡುವೆ ಸ್ಪರ್ಧೆ ಇದೆಯೇ ಹೊರೆತು ನಿನ್ನೆ ಮೊನ್ನೆ ಬಂದ ಸಿವಿಸಿಗೆ ಜೊತೆ ಅಲ್ಲ ಎಂದು ತೀಕ್ಷ್ಣವಾಗಿ ಉತ್ತರಿಸಿದ್ದಾರೆ.
ಜೆಡಿಎಸ್ ಬಿಡಲ್ಲವೆಂದು ರಕ್ತದಲ್ಲಿ ಬರೆದುಕೊಡಲಿ :
ನಮ್ಮ ಮಾವನವರು ಬಿಜೆಪಿ ಬಿಡುವುದಿಲ್ಲ. ರಕ್ತದಲ್ಲಿ ಬರೆದು ಕೊಡುವೆ ಎಂದು ಹೇಳುವ ಮೂಲಕ ದಿಟ್ಟತನ ಮೆರೆದಿದ್ದಾರೆ. ಸಿ.ವಿ.ಚಂದ್ರಶೇಖರ್ ಅವರಿಗೆ ಧೈರ್ಯ ಇದ್ದರೆ, ಕೊನೆಯವರೆಗೂ ಜೆಡಿಎಸ್ ನಲ್ಲೇ ಇರುವೆ ಎಂದು ರಕ್ತದಲ್ಲಿ ಬರೆದು ಕೊಡಲಿ ಎಂದು ಸವಾಲು ಹಾಕಿದರು.
ಸಂಸದರ ಅಭಿವೃದ್ಧಿ ಹಾಗೂ ಪಕ್ಷ ನಿಷ್ಠೆ ಬಗ್ಗೆ ಜಿಲ್ಲಾದ್ಯಂತ ಜನತೆಗೆ ಗೊತ್ತಿದೆ. ಧೀಮಂತ ನಾಯಕನ ಬಗ್ಗೆ ಹಗುರವಾಗಿ ಮಾತನಾಡಿದರೆ ಸಿವಿಸಿ ಅವರಿಗೆ ಶೋಭೆ ತರಲ್ಲ.
- ಮಂಜುಳಾ ಕರಡಿ,
ಬಿಜೆಪಿ ಮುಖಂಡರು, ಕೊಪ್ಪಳ.
ವರದಿ : ಶಿವಕುಮಾರ್ ಹೀರೆಮಠ