ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ಬಸವ ಜಯಂತಿ ಆಚರಣೆ
ಕಂಪ್ಲಿ.ಏ.30:ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಸಿಐ ಕಂಪ್ಲಿ ಸೋನಾ ಘಟಕದ ವತಿಯಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಿಸಲಾಯಿತು.ಕಂಪ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾದ ಬಂಗಿ ದೊಡ್ಡ ಮಂಜುನಾಥ ಅವರು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲಿಯೇ ಸಾಮಾಜಿಕ ಕ್ರಾಂತಿ ಆರಂಬಿಸಿದರು.ಅಲ್ಲದೇ ಮೂಢನಂಬಿಕೆ,ಅಂಧ ಶ್ರದ್ದೆಗಳನ್ನು ದಿಕ್ಕರಿಸಿ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಜಗಜ್ಯೋತಿ ಬಸವೇಶ್ವರ ಅವರ ಕೊಡುಗೆ ಅನನ್ಯವಾಗಿದ್ದು,ಅವರ ತತ್ವಾದರ್ಶಗಳ ಪರಿಪಾಲನೆಯೊಂದಿಗೆ ಜೀವನ ನಡೆಸಲು ಮುಂದಾಗಬೇಕು ಎಂದರು.
ಈ ವೇಳೆ ಜೆಸಿಐ ಕಂಪ್ಲಿ ಸೋನಾ ಅಧ್ಯಕ್ಷ ಬಿ.ರಸೂಲ್ ಮಾತನಾಡಿ 892ನೇ ಬಸವ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ,ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕ ಯಾರು ಬಸವಣ್ಣನವರನ್ನು ಅನುಕರಿಸುತ್ತಾರೋ ಎಲ್ಲರೂ ಲಿಂಗವಂತರು ಎಂದು 12ನೇ ಶತಮಾನದ ಶರಣರು ಹೇಳಿದ್ದಾರೆ.ಶರಣರ ಆದರ್ಶಗಳು ನಮಗೆ ಮಾದರಿ, ಬಸವಣ್ಣನವರ ಆಚಾರ ವಿಚಾರಗಳು ನಮಗೆ ದಾರಿದೀಪವಾಗಿ,ಸುಂದರ ಸಮಾಜ ನಿರ್ಮಾಣಕ್ಕೆ ಶರಣರ ತತ್ವ ನಮಗೆ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಸಿಐ ಕಂಪ್ಲಿ ಸೋನಾ ಪದಾಧಿಕಾರಿಗಳಾದ ಯು.ಅಕ್ಕಿಜಿಲಾನ್,ಬಿ.ಹೆಚ್.ಎಂ.ಅಮರನಾಥ ಶಾಸ್ತ್ರಿ,ಸಿದ್ದರಾಮೇಶ್ವರ ಶಾಸ್ತ್ರಿಮುಖಂಡರಾದ ನಬಿರಸೂಲ್,ಕರಿಯಪ್ಪನಾಯಕ,ಎಲೆಗಾರಖಾದರಬಾಷ,ಇಮ್ರಾನ,ರಿಯಾಜಬಾಷ ಸೇರಿದಂತೆ ಅನೇಕರಿದ್ದರು.